ಪ್ರೀತಿ ಎನ್ನುವುದು ಯಾವಾಗ ಬೇಕಾದರೂ ಹುಟ್ಟಬಹುದ. ಅದಕ್ಕೆ ಕಾರಣ ಬೇಕಿಲ್ಲ, ಹುಡುಗ, ಹುಡುಗಿ ಇಬ್ಬರ ಮನಸು, ಹೃದಯಕ್ಕೆ ಇಷ್ಟವಾದರೆ ಸಾಕು. ಎಲ್ಲೋ ಹುಟ್ಟಿ ಬೆಳೆದ ಇಬ್ಬರೂ ಒಬ್ಬರ ಮನಸನ್ನು ಒಬ್ಬರು ಅರ್ಥಮಾಡಿಕೊಂಡಾಗ ಪ್ರೀತಿ ತಾನಾಗೇ ಅರಳುತ್ತದೆ,
ಉಡುಪಿಯ ಹುಡುಗ, ತೀರ್ಥಳ್ಳಿಯ ಹುಡುಗಿ ಇಬ್ಬರ ನಡುವೆ ಪ್ರೀತಿ ಹೇಗೆ ಹುಟ್ಟಿತು ಅನ್ನೋದೇ ಅರ್ದಂಬರ್ದ ಪ್ರೇಮಕಥೆ. ಇದರಲ್ಲೇನು ವಿಶೇಷತೆಯಿದೆ ಅನ್ನಬಹುದು. ಅದೇ ಚಿತ್ರದ ಪ್ಲಸ್ ಪಾಯಿಂಟ್.
ನಾಯಕಿಗೆ ನಾಯಕ ಡ್ರಾಪ್ ಕೊಡುವ ನೆಪದಲ್ಲಿ ಆದ ಪರಿಚಯ ಒಂದೇ ದಿನದಲ್ಲಿ ಪ್ರೀತಿ ಮೂಡುವಂತೆ ಮಾಡುತ್ತದೆ. ಈ ಪ್ರೀತಿ, ಪ್ರೇಮ ಎಲ್ಲಾ ಪುಸ್ತಕದ ಬದನೇಕಾಯಿ ಎಂದು ವಾದಿಸುತ್ತಿದ್ದ ನಾಯಕ(ಅರವಿಂದ್ ಕೆ.ಪಿ.), ಕಪಟ ಪ್ರೀತಿಯನ್ನು ನಂಬಿ ಮೋಸ ಹೋದ ನಾಯಕಿ(ದಿವ್ಯಾ ಉರುಡಗ) ಭೇಟಿಯಾಗುವುದೇ ಆಕಸ್ಮಿಕ, ತಾನು ಪ್ರೀತಿಸಿದ್ದು ಒಬ್ಬ ಕುತಂತ್ರಿಯನ್ನು ಎಂಬ ಸತ್ಯಅರಿತ ನಾಯಕಿ ಆತಕೊಟ್ಟ ವಸ್ತುಗಳನ್ನೆಲ್ಲ ಹಿಂದಿರುಗಿಸಲು, ಹೋದಾಗ ತಾನು ಖರ್ಚು ಮಾಡಿದ ಹಣವನ್ನು ವಾಪಸ್ ಕೊಡಬೇಕು ಎಂದು ಶರತ್ತು ಹಾಕುತ್ತಾನೆ. ಕಪಟ ಪ್ರೀತಿಯನ್ನು ನಂಬಿ ಮೋಸಹೋದೆ ಎಂದು ನೊಂದ ಮನಸಿನಿಂದ ಕಾಫಿ ಷಾಪ್ ನಿಂದ ಹೊರಬರುವ ನಾಯಕಿಗೆ, ಮತ್ತೆ ನಾಯಕನೇ ಡ್ರಾಪ್ ಕೊಡುತ್ತಾನೆ, ನಾಯಕನಿಗೆ ಆಕೆಯ ಪರಿಸ್ಥಿತಿ ಅರ್ಥವಾಗುತ್ತದೆ, ಆಕೆಯ ಕೋಪ ತಣ್ಣಗಾದ ಮೇಲೆ, ತನ್ನ ಬೇಸರ ಕಳೆಯಲು ಒಂದಿನ ಪೂರ್ತಿ ಇಬ್ಬರೂ ಬೈಕ್ನಲ್ಲಿ ಜಾಲಿಯಾಗಿ ಸುತ್ತಾಡಿಕೊಂಡು ಬರೋಣ ಎಂದು ನಾಯಕಿ ಕೇಳಿಕೊಳ್ಳುತ್ತಾಳೆ, ಇಲ್ಲಿ ಒಬ್ಬರನ್ನೊಬ್ಬರು ತಮ ಜೀವನದ ಬಗ್ಗೆ ಯಾವುದೇ ಪ್ರಶ್ನೆ ಮಾಡುವ ಹಾಗಿಲ್ಲ, ಹೀಗೆ ಸಾಗುವ ಪಯಣದಲ್ಲಿ ಇಬ್ಬರಿಗೂ ಒಂದಷ್ಟು ರೋಚಕ ಅನುಭವಗಳಾಗುತ್ತವೆ. ದಾರಿಯಲ್ಲಿ ಬೈಕ್ನ ಪೆಟ್ರೋಲ್ ಖಾಲಿಯಾದಾಗ ಬಂಕ್ ಹುಡುಕಿಕೊಂಡು ನಡೆದುಕೊಂಡೇ ಒಂದಷ್ಟು ದೂರ ಸಾಗುತ್ತಾರೆ. ಇಲ್ಲೆಲ್ಲ ಒಂದಷ್ಟು ಘಟನೆಗಳು ನಡೆಯುತ್ತವೆ, ಇನ್ನೇನು ಸಿಟಿ ಹತ್ತಿರದಲ್ಲಿರುವ ಪೆಟ್ರೋಲ್ ಬಂಕ್ ಬಳಿ ಬಂದಾಗ ನಾಯಕ, ನಾಯಕಿಯನ್ನು ಬಿಟ್ಟು ಹೇಳದೆ ಕೇಳದೆ ಹೊರಟು ಹೋಗುತ್ತಾನೆ. ಆತನ ಹೆಸರು, ವಿಳಾಸ, ಪೋನ್ ನಂಬರ್ ಯಾವುದನ್ನೂ ತೆಗೆದುಕೊಂಡಿರದ ನಾಯಕಿ ರೂಮಿಗೆ ಬಂದಮೇಲೂ ಆತನನ್ನು ಮರೆಯದೆ ಪರಿತಪಿಸುತ್ತಾಳೆ. ಮನಸಿಗೆ ಹತ್ತಿರವಾದವರು ದೂರಾದರೆ ಆಗುವ ನೋವು ಎಂಥದ್ದೆಂಬುದರ ಅರಿವು ಆಕೆಗಾಗುತ್ತದೆ. ನಾಯಕನನ್ನು ಪಾರ್ಕ್, ಹೊಟೆಲ್ ಎನ್ನದೆ ತಾವು ಸುತ್ತಾಡಿದ ಜಾಗಗಳನ್ನೆಲ್ಲ ಹುಡುಕಾಡುತ್ತಾಳೆ, ಕೊನೆಗೂ ನಾಯಕನ ಸುಳಿವು ಆಕೆಗೆ ಸಿಗುತ್ತದೆ, ಆದರೆ ನಾಯಕ ಮಾತ್ರ ಆಕೆಯನ್ನು ನಿರ್ಲಕ್ಷಿಸುತ್ತಾನೆ. ಆದರೆ ನಾಯಕಿಗೆ ಗೊತ್ತಾಗದಂತೆ ಆಕೆಯ ಸಂಕಷ್ಟಗಳಿಗೆ ಹೆಲ್ಪ್ ಮಾಡುತ್ತಲೇ ಇರುತ್ತಾನೆ, ಹಣದ ಬೇಡಿಕೆ ಇಟ್ಟು ತೊಂದರೆ ಕೊಡುತ್ತಿದ್ದ ಅಲಾಕೆಯ ಮಾಜಿ ಪ್ರೇಮಿಯ ಹುಟ್ಟಡಗಿಸುತ್ತಾನೆ, ಬಾಡಿಗೆಗಾಗಿ ಪೀಡಿಸುತ್ತಿದ್ದ ನಾಯಕಿಯ ಮನೆ ಮಾಲೀಕನನ್ನು ಕಂಟ್ರೋಲ್ ಮಾಡುತ್ತಾನೆ. ಆದರೆ ಇದಾವುದರ ಅರಿವೂ ಸಹ ನಾಯಕಿಗಿರಲ್ಲ, ಇಬ್ಬರ ನಡುವೆ ಪ್ರೀತಿಯಿದ್ದರೂ ಇಗೋ ಎನ್ನುವುದು ಒಬ್ಬರಿಗೊಬ್ಬರು ಹೇಳಿಕೊಳ್ಳಲು ಬಿಟ್ಟಿರಲ್ಲ, ನಾಯಕಿಯ ಸ್ನೇಹಿತೆ, ಸಹೋದ್ಯೋಗಿಗಳು. ನಾಯಕ ಸ್ನೇಹಿತರು ಇವರಿಬ್ಬರೂ ಒಂದಾಗಲೆಂದು ಹಲವಾರು ಬಾರಿ ಪ್ರಯತ್ನಿಸುತ್ತಾರೆ, ಕೊನೆಗೂ ನಾಯಕ ನಾಯಕಿ ತಮ್ಮ ಮನದ ಪ್ರೀತಿಯನ್ನು ಹೇಳಿಕೊಳ್ಳುತ್ತಾರೋ, ಅಥವಾ ತಮ್ಮ ಸಿದ್ದಾಂತಗಳಿಗೆ ಬದ್ದರಾಗಿ ಸ್ನೇಹಿತರಾಗೇ ಉಳಿಯುತ್ತಾರೋ ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕು, ಕೆಲವೇ ಪಾತ್ರಗಳನ್ನಿಟ್ಟುಕೊಂಡು ನಿರ್ದೇಶಕ ಅರವಿಂದ್ ಕೌಶಿಕ್ ನವಿರಾದ ಪ್ರೇಮಕಥೆಯನ್ನು ತೆರೆಮೇಲೆ ಸುಂದರವಾಗಿ ಮೂಡಿಸಿದ್ದಾರೆ. ಚಿತ್ರದಲ್ಲಿ ಅರ್ಜುನ್ ಜನ್ಯ ಅವರ ಹಾಡುಗಳು ಅದನ್ನು ಕಟ್ಟಿಕೊಟ್ಟಿರುವ ಶೈಲಿ ತುಂಬಾ ಚೆನ್ನಾಗಿದೆ. ಅರ್ದ ಸಿನಿಮಾ ಕಥೆ ಕೇವಲ ಎರಡೇ ಪಾತ್ರಗಳಲ್ಲಿ ಸಾಗಿದರೂ ನಂತರ ಒಂದಷ್ಟು ಸ್ನೇಹಿತರ ಕ್ಯಾರೆಕ್ಟರ್ ಗಳು ಎಂಟ್ರಿಯಾಗಿ ಇವರ ಪ್ರೀತಿಗೆ ಸಪೋರ್ಟ್ ಮಾಡುತ್ತವೆ. ನಾಯಕ ಅರವಿಂದ್ ಮೊದಲ ಚಿತ್ರದಲ್ಲೇ ಪಳಗಿದ ಅಭಿನಯ ನೀಡಿದ್ದಾರೆ. ನಾಯಕಿ ದಿವ್ಯಾ ತನ್ನ ಭಾವಾಭಿನಯದ ಮೂಲಕ ಗಮನ ಸೆಳೆಯುತ್ತಾರೆ. ವೀಕೆಂಡ್ ನಲ್ಲಿ ಮನರಂಜನೆ ಪಡೆಯಲು ಅರ್ದಂಬರ್ದ ಪ್ರೇಮಕಥೆ ಒಂದು ಉತ್ತಮ ಆಯ್ಕೆ.